ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯ ನಂತರ ಧರ್ಮಸಭೆಯು ಶಾಂತಿಗಾಗಿ ಪ್ರಾರ್ಥಿಸುತ್ತಿದೆ
ಲಿಸಾ ಝೆಂಗಾರಿನಿ
ಕಳೆದ ವಾರ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ತೊಂದರೆಗೀಡಾದ ಭಾರತ ಆಡಳಿತದ ಕಾಶ್ಮೀರದ ಕಥೊಲಿಕರು ಈ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿ ಮತ್ತು ನಂತರದ ಪ್ರತೀಕಾರ
ಏಪ್ರಿಲ್ 22 ರಂದು ಪಹಲ್ಗಾಗಾಮ್ ಎಂಬ ರೆಸಾರ್ಟ್ ಪಟ್ಟಣದ ಬಳಿ ಸಶಸ್ತ್ರ ಉಗ್ರಗಾಮಿಗಳು ಈ ದಾಳಿಯನ್ನು ನಡೆಸಿದ್ದು, ಒಬ್ಬ ಕಥೊಲಿಕ ಸೇರಿದಂತೆ 26 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ಘಟನೆಯು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವೆ ದಶಕಗಳಿಂದ ಇದ್ದ ಉದ್ವಿಗ್ನತೆಯನ್ನು ಮತ್ತೆ ಹೆಚ್ಚಿಸಿದೆ, ಭಾರತವು ಪಾಕಿಸ್ತಾನವು ಅಪರಾಧಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರೆ, ಇಸ್ಲಾಮಾಬಾದ್ ಆರೋಪಗಳನ್ನು ತಿರಸ್ಕರಿಸಿದೆ.
ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದು, ವೀಸಾಗಳನ್ನು ಅಮಾನತುಗೊಳಿಸುವುದು ಮತ್ತು ಪಾಕಿಸ್ತಾನದ 80% ಜಮೀನುಗಳಿಗೆ ನೀರನ್ನು ಖಾತ್ರಿಪಡಿಸುವ 1960 ರ ಸಿಂಧೂ ಜಲ ಒಪ್ಪಂದವನ್ನು ಭಾರತದ ಏಕಪಕ್ಷೀಯವಾಗಿ ಸ್ಥಗಿತಗೊಳಿಸುವುದು ಸೇರಿದಂತೆ ಎರಡೂ ಕಡೆಯವರು ತೆಗೆದುಕೊಂಡ ಪ್ರತೀಕಾರದ ಕ್ರಮಗಳ ಸರಣಿಯಲ್ಲಿ, ಏಪ್ರಿಲ್ 30 ರ ಬುಧವಾರದಂದು, ಭಾರತವು ಎಲ್ಲಾ ಪಾಕಿಸ್ತಾನಿ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಘೋಷಿಸಿತು. ದಾಳಿಗೆ ಪ್ರತಿಕ್ರಿಯಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿರವರು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ವರದಿಯಾಗಿದೆ ಮತ್ತು ಮಾಧ್ಯಮ ಮೂಲಗಳು ಭಾರತೀಯ ಭದ್ರತಾ ಪಡೆಗಳು ಉಗ್ರಗಾಮಿಗಳ ಮನೆಗಳನ್ನು ನಾಶಪಡಿಸುವುದು ಸೇರಿದಂತೆ ಪ್ರತೀಕಾರದ ದಮನ ಕಾರ್ಯಾಚರಣೆಗಳನ್ನು ವರದಿ ಮಾಡಿವೆ.
ಶಾಂತಿ ನಿರ್ಮಾಣ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಕಾಶ್ಮೀರದ ಧರ್ಮಸಭೆಯ ನಿರಂತರ ಬದ್ಧತೆ
ಕಾಶ್ಮೀರದಲ್ಲಿ ಶಾಂತಿ ನಿರ್ಮಾಣ ಮತ್ತು ಅಂತರಧರ್ಮೀಯ ಸಾಮರಸ್ಯಕ್ಕೆ ಕಥೋಲಿಕ ಧರ್ಮಸಭೆಯ ನಿರಂತರ ಬದ್ಧತೆಯನ್ನು ಧರ್ಮಾಧ್ಯಕ್ಷರಾದ ಪೆರೇರಾರವರು ಪುನರುಚ್ಚರಿಸಿದರು. ನಮ್ಮ ಧ್ಯೇಯವೆಂದರೆ ಶಾಂತಿ ಮತ್ತು ಭ್ರಾತೃತ್ವವನ್ನು ತರುವುದು ಮತ್ತು ಸಂಸ್ಕೃತಿ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಉತ್ತೇಜಿಸುವುದು ಎಂದು ಅವರು ಹೇಳಿದರು.
ಕ್ರೈಸ್ತರು ಕಾಶ್ಮೀರದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ನೆಲೆಸಿದ್ದಾರೆ ಮತ್ತು ವಿವಿಧ ಶೈಕ್ಷಣಿಕ ಪ್ರಯತ್ನಗಳ ಮೂಲಕ ಅಭಿವೃದ್ಧಿ ಹಾಗೂ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
1893ರಲ್ಲಿ ಸ್ಥಾಪನೆಯಾದ ಶ್ರೀನಗರದಲ್ಲಿರುವ ಪವಿತ್ರ ಕುಟುಂಬದ ದೇವಾಲಯವು ಕಾಶ್ಮೀರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಎಂದು ಫೈಡ್ಸ್ ವರದಿ ಮಾಡಿದೆ. ಕಥೋಲಿಕ ಧರ್ಮಸಭೆಯು 40 ಶಾಲೆಗಳನ್ನು ನಡೆಸುತ್ತಿದ್ದು, ಸುಮಾರು 99 ಪ್ರತಿಶತ ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದಾರೆ.
ಕಾಶ್ಮೀರದ ಕಥೊಲಿಕರು ಹೊಸ ವಿಶ್ವಗುರು ಆಯ್ಕೆಗಾಗಿ ಪ್ರಾರ್ಥನೆಯಲ್ಲಿ ಒಗ್ಗಟ್ಟಾಗಿದ್ದಾರೆ
ಉನ್ನತ ಉದ್ವಿಗ್ನತೆಯ ಹೊರತಾಗಿಯೂ, ಸ್ಥಳೀಯ ಕಥೊಲಿಕರು ಜೂಬಿಲಿಯ ಭರವಸೆಯನ್ನು ಆಚರಿಸುತ್ತಿರುವುದರಿಂದ ಜಾಗತಿಕ ಧರ್ಮಸಭೆಯಿಂದ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತಿದ್ದಾರೆ. ಧರ್ಮಸಭೆಯು ಹೊಸ ವಿಶ್ವಗುರುವನ್ನು ಆಯ್ಕೆ ಮಾಡಲು ಸಿದ್ಧವಾಗುತ್ತಿರುವಾಗ ಸಮುದಾಯವು ಆಶಾದಾಯಕ ಮತ್ತು ಆಧ್ಯಾತ್ಮಿಕವಾಗಿ ಒಗ್ಗಟ್ಟಿನಿಂದ ಉಳಿದಿದೆ ಎಂದು ಧರ್ಮಾಧ್ಯಕ್ಷರಾದ ಪೆರೇರಾರವರು ಹೇಳಿದರು. ಈ ತೊಂದರೆಗೊಳಗಾದ ಪ್ರದೇಶದಲ್ಲಿ, ನಾವೆಲ್ಲರೂ ಧರ್ಮಸಭೆಯ ಒಂದೇ ಭಾಗವೆಂದು ಭಾವಿಸುತ್ತೇವೆ ಎಂದು ಅವರು ಹೇಳಿದರು. ಈ ಆಧ್ಯಾತ್ಮಿಕ ಪರಮಪ್ರಸಾದವು ನಮಗೆ ಮುಂದುವರಿಯಲು ಶಕ್ತಿಯನ್ನು ನೀಡುತ್ತದೆ.
1947 ರಲ್ಲಿ ಭಾರತದ ವಿಭಜನೆಯ ನಂತರ ವಿವಾದಿತ ಪ್ರದೇಶ
ಏತನ್ಮಧ್ಯೆ, ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೇರಿಕ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರವರು ಬುಧವಾರ ಭಾರತದ ವಿದೇಶಾಂಗ ಸಚಿವರು ಮತ್ತು ಪಾಕಿಸ್ತಾನದ ಪ್ರಧಾನಿಯೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಅವರಿಗೆ ಕರೆ ನೀಡಿದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರವರು ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದ್ದಾರೆ, ಘಟನೆಯ ಬಗ್ಗೆ "ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲು" ಪಾಕಿಸ್ತಾನ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
1947ರಲ್ಲಿ ಬ್ರಿಟಿಷ್ ಭಾರತದ ವಿಭಜನೆಯ ನಂತರ ಕಾಶ್ಮೀರವು ಸಂಘರ್ಷಕ್ಕೆ ಒಂದು ಪ್ರಮುಖ ಸ್ಥಳವಾಗಿದೆ, ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ಯುದ್ಧಗಳಿಗೆ (1947-48, 1965, 1971 ಮತ್ತು 1999 ರಲ್ಲಿ) ಮತ್ತು ನಿರಂತರ ಉದ್ವಿಗ್ನತೆಗಳಿಗೆ ಕಾರಣವಾಯಿತು. ಈ ಪ್ರದೇಶವನ್ನು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ: ಜಮ್ಮು ಮತ್ತು ಕಾಶ್ಮೀರ (ಜೆ & ಕೆ); ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಆಜಾದ್, ಜಮ್ಮು ಹಾಗೂ ಕಾಶ್ಮೀರ (ಎಜೆಕೆ), ಪಾಕಿಸ್ತಾನಕ್ಕೆ ಸೇರಿದ್ದು ಮತ್ತು 1962 ರಿಂದ ಚೀನಾ ನಿಯಂತ್ರಿಸುವ ಅಕ್ಸಾಯ್ ಚಿನ್.
2019ರಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ವಾಯತ್ತತೆಯನ್ನು ರದ್ದುಗೊಳಿಸಿತು, ಇದು ಭಾರತ-ಪಾಕಿಸ್ತಾನ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸಿತು.