ಯುಎಸ್ಎಐಡಿ ಕಡಿತದಿಂದ ಲಕ್ಷಾಂತರ ಜನರು ಅಪಾಯದಲ್ಲಿದ್ದಾರೆ
ಜೀನ್-ಬೆನೊಯಿಟ್ ಹರೆಲ್
ಅಂತರಾಷ್ಟ್ರೀಯ ಕಾರಿತಾಸ್ನ ಪ್ರಧಾನ ಕಾರ್ಯದರ್ಶಿ ಅಲಿಸ್ಟೈರ್ ಡಟ್ಟನ್ ರವರು, ಪ್ರಪಂದಾದ್ಯಂತ ಯುಎಸ್ಎಐಡಿ - ಅನುದಾನಿತ ಕಾರ್ಯಕ್ರಮಗಳು ಮತ್ತು ಕಚೇರಿಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಎಚ್ಚರಿಸಿದ್ದಾರೆ, ಹಠಾತ್ ಸ್ಥಗಿತಗೊಳಿಸುವಿಕೆಯು ಲಕ್ಷಾಂತರ ಜನರನ್ನು ಕೊಲ್ಲುತ್ತದೆ ಮತ್ತು ನೂರಾರು ಮಿಲಿಯನ್ ಜನರನ್ನು ಅಮಾನವೀಯ ಬಡತನದ ಜೀವನಕ್ಕೆ ದೂಡುತ್ತದೆ ಎಂದು ಹೇಳಿದ್ದಾರೆ. 40 ಶತಕೋಟಿ ಡಾಲರ್ಗಳಿಗಿಂತ ಹೆಚ್ಚಿನ ವಾರ್ಷಿಕ ಬಜೆಟ್ನೊಂದಿಗೆ, ಯುಎಸ್ಎಐಡಿ ಸುಮಾರು 120 ದೇಶಗಳಲ್ಲಿ, ವಿಶೇಷವಾಗಿ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಮಾನವೀಯ ಮತ್ತು ಅಭಿವೃದ್ಧಿ ನೆರವಿಗೆ ಹಣಕಾಸು ಒದಗಿಸಿದೆ.
ಫೆಬ್ರವರಿ 10, ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಲಿಸ್ಟೈರ್ ಡಟನ್ ರವರು, ಈ ನಿರ್ಧಾರವು ʻಜನರಿಗೆ ದೇವರು ನೀಡಿದ ಮಾನವ ಘನತೆಗೆ ಗಂಭೀರ ಬೆದರಿಕೆಯನ್ನು ಸೂಚಿಸುತ್ತದೆ ಮತ್ತು ಅಗಾಧವಾದ ನೋವನ್ನು ಉಂಟುಮಾಡುತ್ತದೆ ಎಂದು ಹೇಳಿದರು. ಈ ಫಲಿತಾಂಶವು ಜಾಗತಿಕ ಮಾನವೀಯ ಸಮುದಾಯದ ನಮಗೆಲ್ಲರಿಗೂ ಬೃಹತ್ ಸವಾಲುಗಳನ್ನು ಒಡ್ಡುತ್ತದೆ, ನಾವು ಯಾರಿಗೆ ಮತ್ತು ಹೇಗೆ ಸೇವೆ ಸಲ್ಲಿಸಬಹುದು ಎಂಬುದನ್ನು ಸಂಪೂರ್ಣವಾಗಿ ಮರುಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ಅವರು ಗಮನಿಸಿದರು. ಈ ನಿರ್ಧಾರದಿಂದ ಜನರಿಗೆ, ವಿಶೇಷವಾಗಿ ಬಡವರಿಗೆ ಉಂಟಾಗುವ ಹಾನಿಯು ದುರಂತವಾಗಿದ್ದು, ಲಕ್ಷಾಂತರ ಜನರ ಜೀವ ಮತ್ತು ಘನತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಜಾಗತಿಕ ಮಾನವೀಯ ವ್ಯವಸ್ಥೆ ಅಪಾಯದಲ್ಲಿದೆ
ಬುರ್ಕಿನಾ ಫಾಸೊದಲ್ಲಿದ್ದಾಗ ದೂರವಾಣಿ ಮೂಲಕ ಸಂಪರ್ಕಿಸಿದ ಅಲಿಸ್ಟೈರ್ ಡಟ್ಟನ್ ರವರು, ವಿಶ್ವಾದ್ಯಂತ ಮಾನವೀಯ ವ್ಯವಸ್ಥೆಗೆ ಸಂಪೂರ್ಣ ಅನಿಶ್ಚಿತತೆಯನ್ನು ಉಂಟುಮಾಡುತ್ತಿರುವ ಈ ಸಹಾಯ ಸ್ಥಗಿತದ ನಿಜವಾದ ಪರಿಣಾಮಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಹಡಗುಗಳು ಸರಕುಗಳೊಂದಿಗೆ ಬಂದರುಗಳಿಗೆ ಬರುತ್ತಿವೆ, ಆದರೆ ಅವುಗಳನ್ನು ಇಳಿಸಲು, ಅವುಗಳಲ್ಲಿರುವ ವಸ್ತುಗಳನ್ನು ಸಂಗ್ರಹಿಸಲು ಅಥವಾ ಅಗತ್ಯವಿರುವ ವಸ್ತುಗಳನ್ನು ಜನರಿಗೆ ಸಾಗಿಸಲು ನಾವು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.
ಹೊಸ ಅಮೇರಿಕ ಆಡಳಿತವು, ಅಮೇರಿಕ ಸರ್ಕಾರವನ್ನು ಕುಗ್ಗಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಯುಎಸ್ಎಐಡಿ ಮೂಲಕ ಒದಗಿಸಲಾದ ವಿದೇಶಿ ನೆರವನ್ನು ಈ ಪ್ರಕ್ರಿಯೆಯಲ್ಲಿ ಕಡಿಮೆ ಮಾಡಲಾಗಿದೆ. ಫೆಬ್ರವರಿ 8ರ ಶನಿವಾರದಿಂದ ಏಜೆನ್ಸಿಯ ಎಲ್ಲಾ ಸಿಬ್ಬಂದಿ, ಆಡಳಿತಾತ್ಮಕ ರಜೆಯಲ್ಲಿದ್ದಾರೆ ಮತ್ತು 90 ದಿನಗಳವರೆಗೆ ಇವರ ಹಣವನ್ನು ಕಡಿತಗೊಳಿಸಲಾಗಿದೆ. ಕಾರ್ಯಕ್ರಮಗಳ ಮೌಲ್ಯಮಾಪನಕ್ಕೂ ಮುನ್ನ ಈ ಅಮಾನತುಗೊಳಿಸಲಾಗಿದೆ ಎಂದು ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರು ಘೋಷಿಸಿದರು.
"ಸಹಾನುಭೂತಿಯ" ಪ್ರಯತ್ನಕ್ಕಾಗಿ ಕಾರಿತಾಸ್ ಮನವಿ ಮಾಡುತ್ತದೆ
ಯುಎಸ್ಎಐಡಿ 60 ವರ್ಷಗಳಿಗೂ ಹೆಚ್ಚು ಕಾಲ ಕಥೋಲಿಕ ಪರಿಹಾರ ಪ್ರಯತ್ನಗಳ ಅಗತ್ಯ ಪಾಲುದಾರವಾಗಿದೆ. ವಿಶ್ವಾದ್ಯಂತ ಬೃಹತ್ ಮಾನವೀಯ ಅಗತ್ಯಗಳನ್ನು ಪೂರೈಸುವಲ್ಲಿ ಈ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಅಂತರಾಷ್ಟ್ರೀಯ ಕಾರಿತಾಸ್, ಕಡಿತಗಳ ಮರುಪರಿಶೀಲನೆಗೆ ಮತ್ತು ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಪಾಲುದಾರರು ವಿಶ್ವದಾದ್ಯಂತದ ಅತ್ಯಂತ ದುರ್ಬಲ ಜನರನ್ನು ಬೆಂಬಲಿಸುವ ಮೂಲಕ ಸಹಾನುಭೂತಿ ಮತ್ತು ಶಾಂತಿಗೆ, ಬದ್ಧತೆಯನ್ನು ದೃಢವಾಗಿ ಪುನರುಚ್ಚರಿಸಲು ಒಟ್ಟಾಗಿ ಕೆಲಸ ಮಾಡಲು ಮನವಿ ಮಾಡಿದೆ.