ಡಿಆರ್ಸಿಯಲ್ಲಿ ಘರ್ಷಣೆಗಳು ಉಲ್ಬಣಗೊಂಡಿದ್ದು, ಸಾವಿರಾರು ಜನರು ಪಲಾಯನ ಮಾಡುತ್ತಿದ್ದಾರೆ
ವ್ಯಾಟಿಕನ್ ಸುದ್ಧಿ
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿನ (ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ-DRC) ಹೋರಾಟದಲ್ಲಿ M23 ಬಂಡುಕೋರರು ಹೊಸ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ, ಈ ವಾರ ಉತ್ತರ ಕಿವು ಪ್ರಾಂತ್ಯದ ರಾಜಧಾನಿ ಗೋಮಾದ ಕೆಲವು ಭಾಗಗಳನ್ನು ಸುತ್ತುವರೆದು ಆ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ರುವಾಂಡಾ ಬೆಂಬಲಿತ ಮಿಲಿಟಿಯಾಗಳು ಈಗ ಕಾಂಗೋಲೀಸ್ ಸಶಸ್ತ್ರ ಪಡೆಗಳ (FARDC) ಸೈನಿಕರು ಮತ್ತು ಸರ್ಕಾರಿ ಪರ ವಜಲೆಂಡೋ ಮಿಲಿಟಿಯಾಮೆನ್ಗಳಿಂದ ಕೂಡಿದ ಪ್ರತಿರೋಧದ ಪ್ರದೇಶಗಳೊಂದಿಗೆ ಘರ್ಷಣೆ ನಡೆಸುತ್ತಿವೆ.
ಕಳೆದ ಎರಡು ದಿನಗಳಲ್ಲಿ ಒಂಬತ್ತು ಸಾವುಗಳ ನಂತರ, SAMIDRC (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ದಕ್ಷಿಣ ಆಫ್ರಿಕಾದ ಅಭಿವೃದ್ಧಿ ಸಮುದಾಯ ಸೇವಾನಿಯೋಗ) ಇನ್ನೂ ನಾಲ್ಕು ದಕ್ಷಿಣ ಆಫ್ರಿಕಾದ ಸೈನಿಕರು ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೋರಾಟ ಕೇಂದ್ರೀಕೃತವಾಗಿದ್ದು, ಅದು ಈಗ M23 ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ.
ಗೋಮಾ
ಜನವರಿ 27 ರಂದು ಗೋಮಾದ ಧರ್ಮಾಧ್ಯಕ್ಷರಾದ ವಿಲ್ಲಿ ನ್ಗುಂಬಿ ನ್ಗೆಂಗೆಲೆರವರು, ಶೆಲ್ ದಾಳಿಗೆ ಗುರಿಯಾದ ಕಟ್ಟಡದಲ್ಲಿ "ನವಜಾತ ಶಿಶುಗಳ ಸಾವಿಗೆ ಕಾರಣವಾದ" ಮಾತೃತ್ವದ ಪ್ರಧಾನ ಚಾರಿಟಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಘಟಕ ಮತ್ತು ಹೊಸದಾಗಿ ಉದ್ಘಾಟಿಸಲಾದ ಧರ್ಮಕ್ಷೇತ್ರದ ಅಭಿಯೋಜಕರ(ಪ್ರಾಸಿಕ್ಯೂಟರ್) ಕಚೇರಿ ಕಟ್ಟಡವೂ ಸೇರಿ ಹಾನಿಗೊಳಗಾಗಿದೆ ಎಂದು ವರದಿ ಮಾಡಿದರು.
ನಗರಕ್ಕೆ ಆಹಾರ ಒದಗಿಸುವವ (ಫೀಡರ್) ಮಾರ್ಗಗಳು, ಈಗ ಭಾರೀ ಹೋರಾಟ ಮತ್ತು ಲೂಟಿಯಿಂದ ಮುಚ್ಚಿಹೋಗಿವೆ, ಇದರಿಂದಾಗಿ ಜನರು ಸಿಕ್ಕಿಬಿದ್ದಿದ್ದಾರೆ. ಇತರರು ನೆರೆಯ ರುವಾಂಡಾಗೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಮಾನವೀಯ ನೆರವು ವಿತರಣೆಯನ್ನು ಸ್ಥಗಿತಗೊಳಿಸಲಾಗಿರುವುದರಿಂದ ಮುಂದಿನ ಗಂಟೆಗಳಲ್ಲಿ ತೀವ್ರ ಆಹಾರ ಕೊರತೆ ಉಂಟಾಗುವ ಅಪಾಯವಿದೆ ಎಂದು ವಿಶ್ವ ಆಹಾರ ಕಾರ್ಯಕ್ರಮ (WFP) ಕಳವಳ ವ್ಯಕ್ತಪಡಿಸಿದೆ.
ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿರುವ ಕಥೋಲಿಕ ಧರ್ಮಸಭೆಯ ಅಧಿಕೃತ ನೆರವು ಸಂಸ್ಥೆಯಾದ CAFODನ ದೇಶದ ಪ್ರತಿನಿಧಿ ಬರ್ನಾರ್ಡ್ ಬಾಲಿಬುನೊರವರ ಪ್ರಕಾರ, ಗೋಮಾದಲ್ಲಿ ಈಗ ಮಾನವೀಯ ಅಗತ್ಯಗಳು ಹೇರಳವಾಗಿವೆ. “ಹೋರಾಟದಿಂದಾಗಿ ನಗರವು ಸ್ಥಗಿತಗೊಂಡಿದೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಅನೇಕರು ಬೀದಿಗಳಲ್ಲಿ ಭಿಕ್ಷಾಟನೆ ಮಾಡುವ ಸ್ಥಿತಿಗೆ ಇಳಿದಿದ್ದಾರೆ” ಎಂದು ಅವರು ಹೇಳಿದರು.
ತುರ್ತು ಸಹಾಯದ ಅಗತ್ಯವಿರುವ ಲಕ್ಷಾಂತರ ಜನರ ಬಗ್ಗೆ CAFOD ಕಳವಳ ವ್ಯಕ್ತಪಡಿಸುತ್ತಿದೆ - ಕೆಲವರು ಇತ್ತೀಚಿನ ದಿನಗಳಲ್ಲಿ, ಹಲವರು ಹೆಚ್ಚು ಕಾಲ, ಹಿಂಸಾಚಾರದಿಂದ ಪದೇ ಪದೇ ಪಲಾಯನ ಮಾಡುವಂತೆ ಒತ್ತಾಯಿಸಲ್ಪಟ್ಟಿರುವುದರಿಂದ ಅವರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ಗಡಿಗಳಿಲ್ಲದ ವೈದ್ಯರ (ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್) ಸಿಬ್ಬಂದಿ ಕೂಡ ನಗರದ ಮಧ್ಯಭಾಗದಲ್ಲಿ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ದಾಳಿಗಳು, ಗುಂಡಿನ ದಾಳಿಗಳು ಮತ್ತು ಲೂಟಿಗಳನ್ನು ವರದಿ ಮಾಡಿದ್ದಾರೆ, ಇದು ಭೀತಿ ಮತ್ತು ಬೃಹತ್ ಜನಸಂಖ್ಯೆಯ ಸ್ಥಳಾಂತರಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮರೆತುಹೋದ ಬಿಕ್ಕಟ್ಟು
ಕಳೆದ ಮೂರು ದಶಕಗಳಿಂದ ಕಾಂಗೋಲೀಸ್ ಸರ್ಕಾರ ಮತ್ತು ಬಂಡಾಯ ಗುಂಪುಗಳ ನಡುವೆ ಘರ್ಷಣೆಗಳು ನಡೆಯುತ್ತಿದ್ದು, ಈಗ ಹಿಂಸಾಚಾರವು ರುವಾಂಡಾವನ್ನು ಒಳಗೊಂಡ ಪ್ರಾದೇಶಿಕ ಸಂಘರ್ಷವಾಗಿ ಉಲ್ಬಣಗೊಳ್ಳುವ ಭಯವಿದೆ.
ವಿಶ್ವದಾದ್ಯಂತ ಮರೆತುಹೋದ ಅನೇಕ ಬಿಕ್ಕಟ್ಟುಗಳಲ್ಲಿ ಡಿಆರ್ಸಿ ಕೂಡ ಒಂದು. ಪಶ್ಚಿಮದ ಕಣ್ಣುಗಳು ಮಧ್ಯಪ್ರಾಚ್ಯ ಮತ್ತು ಉಕ್ರೇನ್ನ ಮೇಲೆ ಕೇಂದ್ರೀಕೃತವಾಗಿದ್ದರೆ, ಡಿಆರ್ಸಿಯಲ್ಲಿ ಹಸಿವು, ರೋಗ ಮತ್ತು ಹಿಂಸಾಚಾರಕ್ಕೆ ಲಕ್ಷಾಂತರ ಜೀವಗಳು ಬಲಿಯಾಗಿವೆ.