ಸೃಷ್ಟಿಯ ಬಗ್ಗೆ ಕಾಳಜಿಯ ತುರ್ತುಸ್ಥಿತಿಯನ್ನು ಎತ್ತಿ ತೋರಿಸುವ ಅರ್ಥ್ ಪಾರ್ಟ್ನರ್ ಪ್ರದರ್ಶನ
ಟೊಮಾಸೊ ಚಿಕೊ ಮತ್ತು ಲಿಂಡಾ ಬೊರ್ಡೋನಿ
ರೋಮ್ನ ಹೊರಭಾಗದಲ್ಲಿರುವ ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿರುವ ಬೊರ್ಗೊ ಲೌದಾತೆ ಸಿ-ಯಲ್ಲಿ ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 4 ರವರೆಗೆ ಅರ್ಥ್ ಪಾರ್ಟ್ನರ್ ಪ್ರದರ್ಶನ ನಡೆಯಲಿದೆ. ಶುಕ್ರವಾರ ಸುಸ್ಥಿರ ಭವಿಷ್ಯಕ್ಕಾಗಿ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಈ ಉಪಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ, ವಿಶ್ವಗುರು XIV ಲಿಯೋರವರು, "ಜೀವಿಗಳಲ್ಲಿ ಜೀವಿಗಳಾಗಿ", ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸುವ ಮತ್ತು ಸೃಷ್ಟಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಾನವೀಯತೆ ಹೊಂದಿದೆ ಎಂದು ಒತ್ತಿ ಹೇಳಿದರು.
ಕಲೆ ಮತ್ತು ಸುಸ್ಥಿರತೆಯ ಮೂಲಕ ಒಂದು ಪ್ರಯಾಣ
ಬುಧವಾರ ವ್ಯಾಟಿಕನ್ ರೇಡಿಯೊದಲ್ಲಿ ಪ್ರಸ್ತುತಪಡಿಸಲಾದ ಈ ಪ್ರದರ್ಶನವು 28 ದೇಶಗಳ 30 ವರ್ಷದೊಳಗಿನ ಕಲಾವಿದರು ರಚಿಸಿದ 55 ಮಲ್ಟಿಮೀಡಿಯಾ ಯೋಜನೆಗಳನ್ನು ಒಟ್ಟುಗೂಡಿಸುತ್ತದೆ. ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿರುವ ಪೀಳಿಗೆಯ ಭಯ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವುದು ಇದರ ಉದ್ದೇಶವಾಗಿದೆ.
ಅರ್ಥ್ ಪಾರ್ಟ್ನರ್ ಪ್ರಶಸ್ತಿ ವಾರ್ಷಿಕ ಸ್ಪರ್ಧೆಯ ವಿಜೇತರು ಮತ್ತು ಅಂತಿಮ ಸ್ಪರ್ಧಿಗಳು ಪ್ರದರ್ಶಿಸಿರುವ ಕೃತಿಗಳು, ಅಜಾಗರೂಕ ಕ್ರಿಯೆಗಳ ಪರಿಣಾಮಗಳನ್ನು ಎತ್ತಿ ತೋರಿಸುವ ಪ್ರಬಲ ಮತ್ತು ತುರ್ತು ಸಂದೇಶಗಳನ್ನು ತಿಳಿಸಿದರೆ, ಇನ್ನು ಕೆಲವು ಪ್ರಕೃತಿಯ ಸೌಂದರ್ಯವನ್ನು ಕೊಂಡಾಡುತ್ತವೆ.
ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟ್ರಿಯ ಅಧೀನ ಕಾರ್ಯದರ್ಶಿ ಕಾರ್ಡಿನಲ್ ಫ್ಯಾಬಿಯೊ ಬ್ಯಾಗಿಯೊರವರು, ಪ್ರದರ್ಶನವನ್ನು ಸ್ವಾಗತಿಸಿದರು, ಅದರ ಬಲವಾದ ಶೈಕ್ಷಣಿಕ ಮೌಲ್ಯವನ್ನು ಗಮನಿಸಿದರು. "ಬೋರ್ಗೊ ಲೌದಾತೆ ಸಿ'ಯಲ್ಲಿ ಈ ಪ್ರದರ್ಶನವನ್ನು ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ" ಎಂದು ಅವರು ಹೇಳಿದರು. "ಇದು ರಚನೆ ಮತ್ತು ಸಮಗ್ರ ಪರಿಸರ ವಿಜ್ಞಾನದಲ್ಲಿ ಭಾಗವಹಿಸುವ ಒಂದು ಮಾರ್ಗವಾಗಿದೆ, ಇದು ಲೌದಾತೆ ಸಿ'ಯ ಉನ್ನತ ಶಿಕ್ಷಣ ಕೇಂದ್ರದ ಧ್ಯೇಯದ ಹೃದಯಭಾಗದಲ್ಲಿದೆ."
ಇಂದಿನ ಜಾಗತಿಕ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಯುವ ಕಲಾವಿದರ ದೃಷ್ಟಿಕೋನಗಳು ಕೊಡುಗೆ ನೀಡಬಹುದು ಎಂದು ಕಾರ್ಡಿನಲ್ ಬ್ಯಾಗಿಯೊರವರು ಗಮನಿಸಿದರು.
"ಈ ಪ್ರದರ್ಶನವು ವಿಶ್ವದಾದ್ಯಂತದ ಅನೇಕ ಯುವಜನತೆಯ ಧ್ವನಿಯನ್ನು ಕೇಂದ್ರಕ್ಕೆ ತರುತ್ತದೆ, ಅವರು ತಮ್ಮ ಛಾಯಾಚಿತ್ರಗಳ ಮೂಲಕ ಹವಾಮಾನ ಬಿಕ್ಕಟ್ಟು ಮತ್ತು ನಮ್ಮ ಸಾಮಾನ್ಯ ಮನೆಯಾದ ನಮ್ಮ ಗ್ರಹವು ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ" ಎಂದು ಅವರು ವಿವರಿಸಿದರು.
ಕಿರಿಯ ಪೀಳಿಗೆಯೊಂದಿಗೆ ಸಂವಾದವನ್ನು ಬೆಳೆಸುವ ಮಹತ್ವವನ್ನು ಅಧೀನ ಕಾರ್ಯದರ್ಶಿರವರು ಒತ್ತಿ ಹೇಳಿದರು.
"ಅವರ ಸೂಕ್ಷ್ಮತೆಯ ಮೂಲಕ, ಇಲ್ಲಿಗೆ ರಚನೆಗಾಗಿ ಬರುವ ಇತರ ಅನೇಕ ಯುವ ಸಂದರ್ಶಕರೊಂದಿಗೆ ನಾವು ತೊಡಗಿಸಿಕೊಳ್ಳಲು ಆಶಿಸುತ್ತೇವೆ. ಇದರಿಂದಾಗಿ ನಮ್ಮ ಸಾಮಾನ್ಯ ಮನೆಯನ್ನು ನೋಡಿಕೊಳ್ಳುವ ಕರೆ ನಿಜವಾಗಿಯೂ ಎಷ್ಟು ತುರ್ತು ಎಂದು ಅವರು ಅರ್ಥಮಾಡಿಕೊಳ್ಳಬಹುದು" ಎಂದು ಅವರು ಹೇಳಿದರು.
ಆರು ವರ್ಷಗಳ ಹಿಂದೆ ಸೃಜನಶೀಲ ಸಂಸ್ಥೆ ಆರ್ಟ್ ಪಾರ್ಟ್ನರ್ ಸ್ಥಾಪಿಸಿದ ವಾರ್ಷಿಕ ಸ್ಪರ್ಧೆಯಾದ ಅರ್ಥ್ ಪಾರ್ಟ್ನರ್ ಪ್ರಶಸ್ತಿ, ಮಾನವನ ಅಜಾಗರೂಕತೆಯ ಪರಿಣಾಮಗಳು ಮತ್ತು ಪ್ರಕೃತಿಯ ಸೌಂದರ್ಯ ಮತ್ತು ಅದರ ಸ್ಥಿತಿಸ್ಥಾಪಕತ್ವದತ್ತ ಗಮನ ಸೆಳೆಯುವ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ನಿರ್ಮಿಸಿದೆ.